﻿ಕೀರ್ತನೆಗಳು.
32.
ದಾವೀದನ ಕೀರ್ತನೆ. ಮಾಸ್ಕಿಲ ಪದ್ಯ. ಯಾರ ಉಲ್ಲಂಘನೆಗಳು ಕ್ಷಮಿಸಲಾಗಿವೆಯೋ, ಯಾರ ಪಾಪಗಳು ಮುಚ್ಚಲಾಗಿವೆಯೋ ಅವರೇ ಧನ್ಯರು. 
ಯೆಹೋವ ದೇವರು ಯಾರ ಅನ್ಯಾಯವನ್ನು ಎಣಿಸುವುದಿಲ್ಲವೋ, ಯಾರ ಆತ್ಮದಲ್ಲಿ ವಂಚನೆ ಇರುವುದಿಲ್ಲವೋ ಆ ಮನುಷ್ಯನು ಧನ್ಯನು. 
ನಾನು ನನ್ನ ಪಾಪವನ್ನು ಅರಿಕೆ ಮಾಡದೆ ಇದ್ದಾಗ, ದಿನವೆಲ್ಲಾ ನರಳುವುದರಿಂದ ನನ್ನ ಎಲುಬುಗಳು ಸವೆದು ಹೋದವು. 
ದೇವರೇ, ರಾತ್ರಿ ಹಗಲು ನಿಮ್ಮ ಕೈ ನನ್ನ ಮೇಲೆ ಭಾರವಾಗಿತ್ತು; ನನ್ನ ಬಲವು ಬೇಸಿಗೆಯ ಬಿಸಿಲಿನಲ್ಲಿ ಕುಂದಿಹೋಗುವಂತೆ ಆಯಿತು. 
ನನ್ನ ಪಾಪವನ್ನು ನಿಮಗೆ ತಿಳಿಸಿ, ನನ್ನ ಅನ್ಯಾಯವನ್ನು ಮರೆಮಾಡದೆ, “ನನ್ನ ಉಲ್ಲಂಘನೆಗಳನ್ನು ಯೆಹೋವ ದೇವರಿಗೆ ಅರಿಕೆ ಮಾಡುವೆನು,” ಎಂದು ಹೇಳಿದೆನು; ಆಗ, ನೀವು ನನ್ನ ಪಾಪದ ಅಪರಾಧವನ್ನು ಪರಿಹರಿಸಿದಿರಿ. 
ಆದುದರಿಂದ ಭಕ್ತರೆಲ್ಲರು ನೀವು ಸಿಕ್ಕುವ ಕಾಲದಲ್ಲಿ ನಿಮಗೆ ಪ್ರಾರ್ಥನೆ ಮಾಡಲಿ; ನಿಶ್ಚಯವಾಗಿ ನೀರಿನ ಮಹಾಪ್ರವಾಹಗಳು ಅವರ ಸಮೀಪಕ್ಕೆ ಬರುವುದಿಲ್ಲ. 
ನೀವು ನನಗೆ ಮರೆಮಾಡುವ ಸ್ಥಳವಾಗಿರುವಿರಿ; ಇಕ್ಕಟ್ಟಿನಿಂದ ನನ್ನನ್ನು ಕಾಯುತ್ತೀರಿ; ವಿಮೋಚನಾ ಧ್ವನಿಗಳಿಂದ ನೀವು ನನ್ನನ್ನು ಸುತ್ತುವರಿಯುತ್ತೀರಿ. 
ಯೆಹೋವ ದೇವರು ಹೇಳುವುದೇನೆಂದರೆ: ನಾನು ನಿನಗೆ ಬುದ್ಧಿ ಹೇಳಿ, ನೀನು ಹೋಗತಕ್ಕ ಮಾರ್ಗವನ್ನು ನಿನಗೆ ಬೋಧಿಸುವೆನು; ನನ್ನ ಮೆಚ್ಚುಗೆಯಿಂದ ನಿನ್ನನ್ನು ನಡೆಸುವೆನು. 
ವಿವೇಕವಿಲ್ಲದ ಕುದುರೆಯ ಹಾಗೆಯೂ, ಹೇಸರಗತ್ತೆಯ ಹಾಗೆಯೂ ಇರಬೇಡಿರಿ; ಬಾರಿನಿಂದಲೂ, ಕಡಿವಾಣದಿಂದಲೂ ಅವುಗಳನ್ನು ನಿಯಂತ್ರಿಸಬೇಕು, ಇಲ್ಲದಿದ್ದರೆ ಅವು ನಿಮ್ಮ ಅಧೀನಕ್ಕೆ ಬರುವುದಿಲ್ಲ. 
ದುಷ್ಟರಿಗೆ ವ್ಯಥೆಗಳು ಬಹಳ; ಆದರೆ ಯೆಹೋವ ದೇವರಲ್ಲಿ ಭರವಸವಿಡುವವನನ್ನು ಅದರ ಒಂಡಬಡಿಕೆಯ ಪ್ರೀತಿಯು ಸುತ್ತುವರಿಯುವುದು. 
ನೀತಿವಂತರೇ, ಯೆಹೋವ ದೇವರಲ್ಲಿ ಸಂತೋಷಿಸಿರಿ, ಉಲ್ಲಾಸಪಡಿರಿ; ಯಥಾರ್ಥ ಹೃದಯ ಉಳ್ಳವರೇ, ಜಯಗೀತೆ ಹಾಡಿರಿ. 
